ದ್ರುಪದ ರಾಜನ ಮಗನು. ಅಯೋನಿಜ. ಅಧಿರಥ [೧]. ಅಗ್ನಿಕುಂಡದಿಂದ ದ್ರೌಪದಿಯ ಸಂಗಡ ಜನಿಸಿದವನು [೨]. ಈತನು ಅಗ್ನಿಯ ಅಂಶದಿಂದ ಹುಟ್ಟಿದವನು [೩]. ಧೃಷ್ಟದ್ಯುಮ್ನ ಶಬ್ದನಿರ್ವಚನ :
ಧೃಷ್ಟತ್ವಾದತಿಧೃಷ್ಟತ್ವಾದ್ದ್ಯುಮ್ನಾದ್ಯುತ್ಸಂಭವಾದಪಿ ।
ಧೃಷ್ಟದ್ಯುಮ್ನಃ ಕುಮಾರೋಽಯಂ ದ್ರುಪದಸ್ಯ ಭವತ್ವಿತಿ ॥
ತಕ್ಕ ವಯಸ್ಸಿನಿಂದ, ಶಸ್ತ್ರಪೂರಿತವಾದ ರಥದಲ್ಲಿ ಕುಳಿತುಕೊಂಡು, ಪ್ರಗಲ್ಭನೂ ಪ್ರಜಾಪಾಲನ ಚತುರನೂ ಬಲ, ಕವಚ, ಕುಂಡಲ, ಶಸ್ತ್ರ, ಶೌರ್ಯ, ಉತ್ಸಾಹಗಳೊಂದಿಗೆ ಜನಿಸಿದವನೂ ಆದ್ದರಿಂದ ಈತನಿಗೆ ಧೃಷ್ಟದ್ಯುಮ್ನನೆಂದು ಹೆಸರು [೪]. ಈತನು ದ್ರೋಣಾಚಾರ್ಯನಲ್ಲಿಯೇ ಅಸ್ತ್ರವಿದ್ಯೆಯನ್ನು ಕಲಿತನು [೫]. ದ್ರೌಪದೀ ಸ್ವಯಂವರಕ್ಕಾಗಿ ನೆರೆದಿದ್ದ ರಾಜಸಮೂಹದಲ್ಲಿ ದ್ರೌಪದಿಯನ್ನು ಮುಂದಿಟ್ಟುಕೊಂಡು, ಮತ್ಸ್ಯಯಂತ್ರ ಲಕ್ಷ್ಯಭೇಧವನ್ನು ಪಣವಾಗಿರಿಸಿರುವ ಪ್ರಕಾರವನ್ನು ಅರಸರಿಗೆ ತಿಳುಹಿದನು [೬]. ಪಾಂಡವರು ದ್ರೌಪದಿಯನ್ನು ಕರೆದುಕೊಂಡು ಕುಂಬಾರನ ಮನೆಗೆ ಹೋದ ತರುವಾಯ, ಧೃಷ್ಟದ್ಯುಮ್ನನು ಅದೇ ಕುಂಬಾರನ ಮನೆಗೆ ಹೋಗಿ, ಅವಿತುಕೊಂಡಿದ್ದು, ಅವರು ಪಾಂಡವರೆಂಬುದನ್ನು ತಿಳಿದು ಗೂಢವಾಗಿ ದ್ರುಪದನಿಗೆ ತಿಳುಹಿದನು [೭]. ಕೃಷ್ಣನ ಸೂಚನೆಯ ಮೇರೆಗೆ ಯುಧಿಷ್ಠಿರನು ಸೇನಾಪತಿತ್ವನನ್ನು ಧೃಷ್ಟದ್ಯುಮ್ನನಿಗೆ ಒಪ್ಪಿಸಿದ್ದು. ಧೃಷ್ಟದ್ಯುಮ್ನನು ತಮ್ಮ ಪಕ್ಷದ ಅರಸರಿಗೆಲ್ಲ ಬೇರೆ ಬೇರೆ ಬಿಡಾರಗಳನ್ನು ಏರ್ಪಡಿಸಿದ್ದು [೮]. ಸೇನಾಪತಿತ್ವದಲ್ಲಿ ಧೃಷ್ಟದ್ಯುಮ್ನನಿಗೆ ಪಟ್ಟಗಟ್ಟಿದ್ದು [೯]. ಧೃಷ್ಟದ್ಯುಮ್ನನು ಭೀಮಾದಿಗಳನ್ನು ದುರ್ಯೋಧನಾದಿಗಳೊಡನೆ ದ್ವಂದ್ವ ಯುದ್ಧಕ್ಕೆ ಕಳುಹಿದ್ದು [೧೦].
ಮೊದಲನೆಯ ದಿವಸ ಯುದ್ಧದಲ್ಲಿ ಪಾಂಡವ ಸೇನೆಯನ್ನು ಕ್ರೌಂಚಪಕ್ಷಿಯ ರೂಪದಲ್ಲಿ ಏರ್ಪಡಿಸಿದ್ದನು [೧೧]. ಬಾಹ್ಲೀಕ ರಾಜನಾದ ಶಲನ ಮಗನನ್ನು ಕೊಂದನು [೧೨]. ಆರನೆಯ ದಿನದ ಯುದ್ಧಾರಂಭದಲ್ಲಿ ಸೇನೆಯನ್ನು ಮಕರಾಕಾರವಾಗಿ ಏರ್ಪಡಿಸಿದ್ದನು [೧೩]. ಹದಿನಾಲ್ಕನೆಯ ದಿನದಲ್ಲಿ ದ್ರೋಣನೊಂದಿಗೆ ಯುದ್ಧ [೧೪]. ಅದೇ ರಾತ್ರಿಯಲ್ಲಿ ಅಶ್ವತ್ಥಾಮನೊಂದಿಗೆ ಯುದ್ಧ [೧೫]. ಅದೇ ರಾತ್ರಿಯಲ್ಲಿ ಭೀಮನು ಧೃಷ್ಟದ್ಯುಮ್ನನನ್ನು ನಿಷ್ಠುರ ಭಾಷಣಗಳಿಂದ ರೇಗಿಸಿ, ಯುದ್ಧಕ್ಕೆ ಕಳುಹಿದ್ದು [೧೬]. ದ್ರೋಣನು ಹಿಡಿದುಕೊಳ್ಳಲಾಗಿ ಸಾತ್ಯಕಿ ಬಿಡಿಸಿದ್ದು [೧೭]. ಹದಿನೈದನೆಯ ದಿನ ದ್ರೋಣನೊಂದಿಗೆ ಯುದ್ಧ ಮತ್ತು ದ್ರೋಣನ ತಲೆಯನ್ನು ಕತ್ತರಿಸಿದ್ದು [೧೮]. ದ್ರೋಣನನ್ನು ಕೊಂದದ್ದು ನ್ಯಾಯವಲ್ಲವೆಂದು ಅರ್ಜುನನು ಧೃಷ್ಟದ್ಯುಮ್ನನನ್ನು ಅಲ್ಲಗಳೆಯಲಾಗಿ, ಧೃಷ್ಟದ್ಯುಮ್ನನು ಸಿಟ್ಟಾಗಿ ಅರ್ಜುನನಿಗೆ ಕ್ಷಾತ್ರಧರ್ಮವನ್ನು ವಿವರಿಸಿ, ತಾನು ಮಾಡಿದ್ದು ಧರ್ಮವಿರುದ್ದವಲ್ಲವೆಂದು ಹೇಳಿದ್ದು [೧೯]. ಸಾತ್ಯಕಿ ಧೃಷ್ಟದ್ಯುಮ್ನರ ವಿವಾದ. ಧೃಷ್ಟದ್ಯುಮ್ನನನ್ನು ಕೊಲ್ಲುವುದ್ಕಾಗಿ ಗದೆಯನ್ನು ಎತ್ತಿದ ಸಾತ್ಯಕಿಯನ್ನು ಕೃಷ್ಣನು ಅಡ್ಡಗಿಸಿ ಧೃಷ್ಟದ್ಯುಮ್ನನನ್ನು ಬಿಡಿಸಿದ್ದು [೨೦]. ಹದಿನೇಳನೆಯ ದಿನ ಕೃಪಾಚಾರ್ಯನೊಂದಿಗೆ ಯುದ್ಧಮಾಡಿ ಸೋತದ್ದು [೨೧]. ಅದೇ ದಿನದಲ್ಲಿ ದುಶ್ಶಾಸನನೊಂದಿಗೆ ಯುದ್ಧ [೨೨]. ಹದಿನೆಂಟನೆಯ ದಿನ ದುರ್ಯೋಧನನೊಂದಿಗೆ ಯುದ್ಧ. ಇವನಿಂದ ಸೋತುಹೋದ ದುರ್ಯೋಧನನು ಕುದುರೆಯನ್ನೇರಿ ಓಡಿ ಹೋದದ್ದು [೨೩]. ಅಶ್ವತ್ಥಾಮನು ಇವನ ತಲೆಯನ್ನು ಕಡಿದದ್ದು [೨೪]. ಇವನ ಮಕ್ಕಳಲ್ಲಿ ಕ್ಷತ್ರಂಜಯ, ಕ್ಷತ್ರದೇವ, ಕ್ಷತ್ರವರ್ಮರೆಂಬ ಮೂವರನ್ನು ದ್ರೋಣನು ಹದಿನೈದನೆಯ ದಿನದ ಯುದ್ಧದಲ್ಲಿ ಕೊಂದನು [೨೫]. ಕ್ಷತ್ರಧರ್ಮನೆಂಬ ಮತ್ತೊಬ್ಬ ಮಗನು ಹದಿನಾಲ್ಕನೆಯ ದಿನದ ರಾತ್ರಿ ಯುದ್ಧದಲ್ಲಿ ದ್ರೋಣನಿಂದಲೇ ಹತನಾದನು [೨೬].
ಉಲ್ಲೇಖ :
[೧] ಮಹಾಭಾರತ ಉದ್ಯೋಗಪರ್ವ ೧೭೧.
[೨] ಮಹಾಭಾರತ ಆದಿಪರ್ವ ೬೪, ೧೪೯, ೧೭೧.
[೩] ಮಹಾಭಾರತ ಆದಿಪರ್ವ ೬೮.
[೪] ಮಹಾಭಾರತ ಆದಿಪರ್ವ ೧೪೯, ೧೮೧.
[೫] ಮಹಾಭಾರತ ಆದಿಪರ್ವ ೧೮೧.
[೬] ಮಹಾಭಾರತ ಆದಿಪರ್ವ ೨೦೦.
[೭] ಮಹಾಭಾರತ ಆದಿಪರ್ವ ೨೦೭.
[೮] ಮಹಾಭಾರತ ಉದ್ಯೋಗಪರ್ವ ೧೫೧, ೧೫೨.
[೯] ಮಹಾಭಾರತ ಉದ್ಯೋಗಪರ್ವ ೧೫೭.
[೧೦] ಮಹಾಭಾರತ ಉದ್ಯೋಗಪರ್ವ ೧೬೪.
[೧೧] ಮಹಾಭಾರತ ಭೀಷ್ಮಪರ್ವ ೫೦.
[೧೨] ಮಹಾಭಾರತ ಭೀಷ್ಮಪರ್ವ ೬೧.
[೧೩] ಮಹಾಭಾರತ ಭೀಷ್ಮಪರ್ವ ೭೫.
[೧೪] ಮಹಾಭಾರತ ದ್ರೋಣಪರ್ವ ೯೭.
[೧೫] ಮಹಾಭಾರತ ದ್ರೋಣಪರ್ವ ೧೬೧.
[೧೬] ಮಹಾಭಾರತ ದ್ರೋಣಪರ್ವ ೧೮೭.
[೧೭] ಮಹಾಭಾರತ ದ್ರೋಣಪರ್ವ ೧೯೨.
[೧೮] ಮಹಾಭಾರತ ದ್ರೋಣಪರ್ವ ೧೯೩.
[೧೯] ಮಹಾಭಾರತ ದ್ರೋಣಪರ್ವ ೧೯೮.
[೨೦] ಮಹಾಭಾರತ ದ್ರೋಣಪರ್ವ ೧೯೯.
[೨೧] ಮಹಾಭಾರತ ಕರ್ಣಪರ್ವ ೧೭.
[೨೨] ಮಹಾಭಾರತ ಕರ್ಣಪರ್ವ ೬೩.
[೨೩] ಮಹಾಭಾರತ ಶಲ್ಯಪರ್ವ ೨೪.
[೨೪] ಮಹಾಭಾರತ ಸೌಪ್ತಿಕಪರ್ವ ೮.
[೨೫] ಮಹಾಭಾರತ ದ್ರೋಣಪರ್ವ ೧೫೫.
[೨೬] ಮಹಾಭಾರತ ದ್ರೋಣಪರ್ವ ೧೨೫.